ಶತಶತಮಾನಗಳಿಂದ ಭೂಮಿಯೇ ಸರ್ವಸ್ವ, ವ್ಯವಸಾಯವೇ ಧರ್ಮ ಎಂದು ಭಾವಿಸಿರುವ ಒಕ್ಕಲಿಗ ಜನಾಂಗವು ದೇಶದ ಸರ್ವತೋಮುಖ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವನ್ನುವಹಿಸುತ್ತಿದೆ.

ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರು, ವಿಶ್ವಮಾನವ, ರಾಷ್ಟ್ರಕವಿ ಎಂದೇ ಪ್ರಖ್ಯಾತರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಶ್ರೀ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ (ಕುವೆಂಪು), ಆದಿಚುಂಚನಗಿರಿ ಪೀಠಾಧ್ಯಕ್ಷರಾ ಪದ್ಮಭೂಷಣ, ಪರಮಪೂಜ್ಯ ಜಗದ್ಗುರು ಭೈರವೈಕ್ಯ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿ, ಕರ್ನಾಟಕ ಏಕೀಕರಣ ಪ್ರತಿಪಾದಕರಾದ ಸಮಾಜವಾದಿ ಶಾಂತವೇರಿ ಗೋಪಾಲಗೌಡ, ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿದ್ದು ವಿಧಾನಸೌಧ ಶಿಲ್ಪಿ ಎಂದೆ ಶಾಶ್ವತ ಬಿರುದಾಂಕಿತರಾದ ಶ್ರೀ ಕೆಂಗಲ್ ಹನುಮಂತಯ್ಯ, ಮಣ್ಣಿನ ಮಗನಾಗಿ ಹುಟ್ಟಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಹಾಗೂ ಅಖಂಡ ಭಾರತದ ಪ್ರಧಾನಮಂತ್ರಿಗಳಾಗಿ ರಾಷ್ಟ್ರ ರಾಜಕಾರಣದಲ್ಲಿ ಧೃವತಾರೆಯಾಗಿ ಮೆರೆಯುತ್ತಾ ಇಳಿವಯಸ್ಸಿನಲ್ಲೂ ನವಯುವಕರನ್ನು ನಾಚಿಸುವಂತೆ ಮಾಡುತ್ತಿರುವ ರಾಜ್ಯಾಂಗ ಚತುರ ಸನ್ಮಾನ್ಯ ಶ್ರೀ ಹೆಚ್.ಡಿ. ದೇವೇಗೌಡರಂತಹ ಮಹಾ ಚೇತನಗಳನ್ನು ಹಾಗೂ ಕರ್ನಾಟಕದ ಕನ್ನಡ ಭಾಷೆ, ನೆಲ, ಜಲ, ಸಂರಕ್ಷಣೆ ಹಾಗು ಉಳಿವಿಗಾಗಿ ಸಾರಥಿಯಾಗಿ ನಿಂತಿರುವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಶ್ರೀ ಟಿ.ಎ. ನಾರಾಯಣಗೌಡರಂತಹ ಗಜಶಕ್ತಿಯನ್ನು ರಾಷ್ಟ್ರಕ್ಕೆ ನೀಡಿದ ನಮ್ಮ ಜನಾಂಗ ಸ್ವಂತ ದುಡಿಮೆಯಿಂದಲೇ ವಿವಿಧ ಕ್ಷೇತ್ರಗಳಲ್ಲಿ ಹಂತ-ಹಂತವಾಗಿ ಬೆಳೆದು ಸಾಕಾರದ ತುಟ್ಟತುದಿಯಲ್ಲಿ ನಿಂತಿದೆ.

ಒಕ್ಕಲಿಗ ಇತಿಹಾಸವು ಅಗೆದಷ್ಟೂ ಆಳವಾಗಿದೆ. ವ್ಯವಸಾಯ ಮಾಡುವವರನ್ನ ಒಕ್ಕಲಿಗ ಎನ್ನುತ್ತಾರೆ, ಕನ್ನಡ ನಾಡು ಅಥವಾ ಕರುನಾಡಿನ ರೈತರನ್ನು ಒಕ್ಕಲಿಗ ಎಂದು ಕರೆಯುತ್ತಾರೆ. ಮಧ್ಯಮ ಪಾಂಡವನಾದ ಅರ್ಜುನನು ಆದಿಚುಂಚನಗಿರಿಯ ಶ್ರೀ ಕಾಲಭೈರವನಿಂದ ಜೋಗಿ ದೀಕ್ಷೆ ಪಡೆದು ದೇಶದಾದ್ಯಂತ ಯಾತ್ರೆ ಮಾಡಿ ಕೃಷಿಕ ಜನರನ್ನು ಒಕ್ಕಲಿಗರನ್ನಾಗಿ ಮಾಡಿದನೆಂಬ ಪ್ರತೀತಿ ಇದೆ. ದಕ್ಷಿಣ ಕರ್ನಾಟಕದ ಬಹು ಸಂಖ್ಯಾತ ಕೃಷಿಕರು ಒಕ್ಕಲಿಗ ಗೌಡರಾಗಿದ್ದಾರೆ. ಆದರೆ ಕರ್ನಾಟಕದ ಉತ್ತರ ಬಾಗದಲ್ಲಿ ಇರುವ ಕೃಷಿಕರು ಸಹಾ ಆಯಾ ಹಳ್ಳಿಗಳಲ್ಲಿ ಒಕ್ಕಲುತನ ಮಾಡುವವರು, ಒಕ್ಕಲಿಗರು ಎಂದೇ ಸಂಬೋಧಿಸುತ್ತಾರೆ. ಕರ್ನಾಟಕದ ಉತ್ತರ ಬಾಗದಲ್ಲಿ ಇದ್ದ ಒಕ್ಕಲಿಗರು 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರ ಉಪದೇಶ ಪ್ರೇರಣೆಯಿಂದ ಕಾಯಕವೇ ಕೈಲಾಸ ವ್ರತಾಚಾರಣರಾಗಿ ಶರಣ ದೀಕ್ಷೆ ಪಡೆದು ಲಿಂಗಾಯಿತ ಶರಣರಾಗಿ ಪ್ರವರ್ತಿತರಾಗಿರುತ್ತಾರೆ.

 

ಪ್ರಮುಖ ಮೌಲ್ಯಗಳು:

ಇತಿಹಾಸ ಪುಟಗಳಾದ ಕವಿರಾಜ ಮಾರ್ಗ, ಪಂಪಭಾರತ ಗ್ರಂಥಗಳಲ್ಲಿ ಒಕ್ಕಲಿಗರ ಉಲ್ಲೇಖವಿದೆ. ಗತಕಾಲದಿಂದಲೂ ಹೊಲದಲ್ಲಿ ಉಳುವುದು, ಬಿತ್ತುವುದು ಹಾಗು ಕೃಷಿ ಕೆಲಸಗಳನ್ನು ಮಾಡುವ ರೈತನನ್ನು ಒಕ್ಕಲಿಗ ಎನ್ನುವರು. ರೈತರು ಭಲಿಷ್ಟ ದೃಡಕಾಯರಾಗಿದ್ದು ಹಿಂದಿನಿಂದಲೂ ಕನ್ನಡನಾಡಿನ ರಾಷ್ಟ್ರಕೂಟ, ಚಾಲುಕ್ಯ, ಹೊಯ್ಸಳ, ವಿಜಯನಗರ ಸಾಮ್ರಾಜ್ಯದ ರಾಜರುಗಳ ಯುದ್ದ ಸಂದರ್ಭದಲ್ಲಿ ಸಂಬಳ ರಹಿತ ಸೈನಿಕರಾಗಿಯೂ ದೇಶ ಸೇವೆಮಾಡಿದ್ದಾರೆ. ಇವರ ಸೇವೆಗಳಿಗೆ ಮೆಚ್ಚಿ ರಾಜರುಗಳು ಅವರಿಗೆ ಗ್ರಾಮಗಳನ್ನು ಬಳುವಳಿಯಾಗಿ ನೀಡುತ್ತಿದ್ದರು. ಈ ರೀತಿ ಬಳುವಳಿಯಾಗಿ ಬಂದ ಗ್ರಾಮಗಳಿಗೆ ಒಬ್ಬ ಮುಖ್ಯಸ್ಥರಾಗಿ, ನಾಡಗೌಡ ಅಥವ ಊರಗೌಡರಾಗಿ ಆಡಳಿತ ನಡೆಸುತ್ತಿದ್ದರು. ಮುಂದೆ ಇವರೇ ಪಟೇಲರೆಂದು ಅಧಿಕೃತಗೊಂಡರು. ಊರಿನ ಭೂದಾಖಲೆ ಕಂದಾಯ ಇತ್ಯಾದಿ ವ್ಯವಹಾರಗಳಲ್ಲಿ ನಾಡಗೌಡ , ಊರಗೌಡ, ಪಟೇಲ ಇವರಿಗೆ ಶಾನುಭೋಗರು ಸಹಾಯ ಮಾಡುತ್ತಿದ್ದರು. ರಾಜಾದಾಯದ ಭಾಗವನ್ನು ರಾಜಧಾನಿಗೆ ಕೊಂಡೊಯ್ದು ರಾಜರಿಗೆ ಒಪ್ಪಿಸುವ ಜವಾಬ್ದಾರಿ ನಾಡಗೌಡ , ಊರಗೌಡ, ಪಟೇಲ ಇವರದಾಗಿರುತ್ತಿದ್ದರು. ಇದಕ್ಕಾಗಿ ಒಂದು ಪ್ರತ್ಯೇಕ ಸೈನ್ಯವನ್ನು ಸಹ ಇವರು ಹೊಂದಿರುತ್ತಿದ್ದರು. ಹೀಗಾಗಿ ಇವರುಗಳು ಉತ್ತಮ ಆಡಳಿತಗಾಗರರಾಗಿ ರೂಪುಗೊಂಡರು.

ಕೆಂಪೇಗೌಡರು ಅಂದಿನ ಕಾಲದಲ್ಲಿ ವಿಜಯನಗರದ ಪ್ರತಿಕೃತಿ ಎಂದು ಹೆಸರಾದ ಬೆಂಗಳೂರು ನಗರವನ್ನೆ ನಿರ್ಮಿಸಿದರು. ಕೆಂಗಲ್ ಹನುಮಂತಯ್ಯನವರು ವಿಧಾನ ಸೌಧವನ್ನು ನಿರ್ಮಿಸಿದ್ದಾರೆ. ಎಸ್‌. ಎಂ. ಕೃಷ್ಣ ರವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ ವಿಕಾಸಸೌಧವನ್ನೂ ನಿರ್ಮಿಸಿದರು. ಹೆಚ್. ಡಿ. ದೇವೆಗೌಡರು, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ, ಭವ್ಯ ಭಾರತದ ಪ್ರಧಾನ ಮಂತ್ರಿಳಾಗಿ ರಾಷ್ಟ್ರ ಮೆಚ್ಚುವಂತೆ ಆಡಳಿತ ನಡೆಸಿ ಮಣ್ಣಿನ ಮಗ ಎಂದೇ ಬಿರುದಾಂಕಿತರಾದರು. ಕೆಂಪುಕೋಟೆಯ ಮೇಲೆ ತ್ರಿವರ್ಣ ದ್ವಜ ಹಾರಿಸಿದ ಏಕೈಕ ಕನ್ನಡಿಗರು ಇವರಾಗಿದ್ದು ಇವರಿಂದಾಗಿ ಒಕ್ಕಲಿಗ ಜನಾಂಗವು ರಾಷ್ಟ್ರ ರಾಜಕಾರಣದಲ್ಲಿ ಮಂಚೂಣಿಗೆ ಬಂದಿತು ಎಂದರೆ ಅತಿಶಯೋಕ್ತಿಯಾಗಲಾರದು.
ಕನ್ನಡಿಗ ಕೃಷಿಕರನ್ನು ಉಲ್ಲೇಖಿಸಲು ಒಕ್ಕಲಿಗ ಎಂಬ ಪದವನ್ನು ಬಳಸಲಾಯಿತು. ಒಕ್ಕಲಿಗ ಸಮುದಾಯವು ಗಂಗಟಿಕಾರ, ನಾಮಧಾರಿ ಒಕ್ಕಲಿಗ, ಮೊರಸು ಒಕ್ಕಲಿಗ, ಕುಂಚಟಿಗ, ಹಳ್ಳಿಕಾರ(ಪಾಲಿಕರ್) ಒಕ್ಕಲಿಗ, ಅರೆಬಾಷೆ ಗೌಡ ಮುಂತಾದ ಹಲವಾರು ಉಪ-ಗುಂಪುಗಳನ್ನು ಹೊಂದಿದೆ.

ಗಂಗಟಿಕಾರ/ಗಂಗಡಕಾರ ಒಕ್ಕಲಿಗ ಎದು ಕರೆಯುವು ಒಕ್ಕಲಿಗ ಗುಂಪು ಮೊದಲನೇ ಅತಿದೊಡ್ಡ ಒಕ್ಕಲಿಗ ಉಪಗುಂಪಾಗಿದೆ. ಇವರನ್ನು ಗಂಗರಾಜರುಗಳ ಕುಲದವರು ಎಂದು ಹೇಳುತ್ತಾರೆ. ಇವರು ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ರಾಮನಗರ, ಮಂಡ್ಯ, ಹಾಸನ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಹೆಚ್ಚಾಗಿ ನೆಲೆಸಿದ್ದರೆ. ಮೊರಸು ಒಕ್ಕಲಿಗರೌ ಹೆಚ್ಚಾಗಿ ಕೋಲಾರ ಮತ್ತು ಚಿಕ್ಕಬಳಾಪುರದಲ್ಲಿ ನೆಲೆಸಿದ್ದಾರೆ. ಹಾಲಕ್ಕಿ ಒಕ್ಕಲಿಗರು ಹೆಚ್ಚಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಲೆಸಿದ್ದಾರೆ. ಸರ್ಪ ಒಕ್ಕಒಗರು ಹೆಚ್ಚಾಗಿ ಚಿಕ್ಕಮಗಳೂರು, ಚಿತ್ರದುರ್ಗ ತುಮಕೂರು ಮತ್ತು ಬಳ್ಳಾಲಿ ಜಿಲ್ಲೆಯಲ್ಲಿ ನೆಲೆಸಿದ್ದು ಇವರಲ್ಲಿ ಶೆಟ್ಟೆಯವರು ಹಾಗೂ ಲಾದ್ಲೆಯವರು ಎಂದು ಎರಡು ಪಂಗಡಗಳಿವೆ. ಹಳ್ಳಿಕಾರ ಒಕ್ಕಲಿಗರಲ್ಲಿ ೧೦೧ ಕುಲಗಳಿದ್ದು ಇವರು ಇವರು ತುಮಕೂರು ಜಿಲ್ಲೆ, ಚಿಕ್ಕಮಗಳೂರು, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಹೆಚ್ಚಾಗಿ ನೆಲೆಸಿದ್ದಾರೆ. ನಾಮಧಾರಿ ಒಕ್ಕಲಿಗರು ಎರಡನೇ ಅತಿದೊಡ್ಡ ಒಕ್ಕಲಿಗ ಉಪಗುಂಪಾಗಿದ್ದು, ಇವರು ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ, ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ಮುಖ್ಯವಾಗಿ ಕಂಡುಬಂದರೂ, ಅವರು ಕರಾವಳಿ ಮತ್ತು ಬಯಲು ಸೀಮೆಗಳಿಗೆ ಹರಡಿಕೊಂಡಿದ್ದಾರೆ. ಇವರಲ್ಲಿ ಮೂಲತಃ 18 ಕುಟುಂಬಗಳು ಅಥವಾ ಉಪ-ಕ್ಷೇತ್ರಗಳು ಮತ್ತು ಮಡಿಕೆಗಳಿಗೆ ಸೇರಿರುತ್ತಾರೆ ಎಂದು ಹೇಳಲಾಗಿದೆ. ಅರೆಬಾಷೆ ಗೌಡರು ಮುಖ್ಯವಾಗಿ ದಕ್ಷಿಣ ಕನ್ನಡ, ಕೊಡಗು ಜಿಲ್ಲೆ, ಕರ್ನಾಟಕ ಮತ್ತು ಕೇರಳ ರಾಜ್ಯದ ಕಾಸರಗೋಡಿನ ಬಂಡಡ್ಕಾ ಗ್ರಾಮದಲ್ಲಿ ನೆಲೆಗೊಂಡಿರುವ ಒಕ್ಕಲಿಗ ಸಮುದಾಯದ ಉಪವಿಭಾಗವಾಗಿದೆ. ಅವರು ೧೦ ಕುಟುಂಬ ಮತ್ತು ೧೮ ಬರಿಯ ತಮ್ಮ ಆದಿಸ್ವರೂಪದ ಮೂಲ ಕುಟುಂಬಗಳನ್ನು ಹೊಂದಿದ್ದಾರೆ. ಉಪ್ಪಿನ ಕೊಳಗ ಒಕ್ಕಲಿಗರು ಹೆಚ್ಚಿಗೆ ರಾಜನಂತೆ, ಬ್ಯಾಡನೂರು ಪಾವಗಡ ಇಲ್ಲಿ ೧೮ ನೇ ಶತಮಾನದ ಅಸುಪಾಸಿನಲ್ಲಿ ಇದ್ದು ವಿಜಯನಗರದ ಶ್ರೀರಂಗರಾಯರ ಕಾಲದಲ್ಲಿ ಆಂಧ್ರಗಡಿ ಭಾಗದಲ್ಲಿ ಗೌಡಿಕೆ ಮಾಡುತ್ತಿರುವುದು ದಾಖಲಿದೆ. ಇವರು ತುಮಕೂರು ಜಿಲ್ಲೆ ಮತ್ತು ಈ ಜಿಲ್ಲೆಯ ಮಧುಗಿರಿ, ಪಾವಗಡ, ಅಕ್ಕಪಕ್ಕದ ಭಾಗಗಳಲ್ಲಿ ಹೆಚ್ಚಾಗಿ ನೆಲೆಸಿದ್ದಾರೆ.

ಹೆಚ್ಚಿನ ಒಕ್ಕಲಿಗ ಪಂಗಡಗಳು ಶೈವ ಅಥವಾ ವೈಷ್ಣವ ದೇವರುಗಳ ಆರಾಧಕರು . ಈ ಹಿಂದೆ ನಾಮಧಾರಿ ಗೌಡರು, ಜೈನ ಧರ್ಮಕ್ಕೆ ಪರಿವರ್ತಿತರಾಗಿದ್ದ ಒಕ್ಕಲಿಗರೇ ಆಗಿದ್ದರು. ಹೊಯ್ಸಳ ರಾಜ ವಿಷ್ಣುವರ್ಧನನು ಜೈನ ಮತದಿಂದ ವೈಷ್ಣವ ಮತಕ್ಕೆ ಪರಿವರ್ತಿತನಾದ ಸಮಯದಲ್ಲಿ ಅವರೊಂದಿಗೆ ಅನೇಕ ಜೈನರು ಹಿಂದೂ ಧರ್ಮಕ್ಕೆ ಮರು ಪರಿವರ್ತನೆಯಾದರು. ಶ್ರೀವೈಷ್ಣವ ಆಚಾರ್ಯ, ಶ್ರೀ ರಾಮಾನುಜರಿಂದ ಅವರು ಶ್ರೀವೈಷ್ಣವ ನಾಮ ಅಥವಾ ತಿಲಕವನ್ನು ಧಾರಣೆ ಮಾಡಿದರು. ಆ ನಂತರ ಈ ಒಕ್ಕಲಿಗ ಪಂಗಡ ನಾಮಧಾರಿ ಗೌಡರು ಎಂಬ ಹೆಸರನ್ನು ಪಡೆದುಕೊಂಡಿರು. ಆದ್ದರಿಂದ ಅವರು ವಿಷ್ಣು ಮತ್ತು ತಿರುಪತಿ ತಿಮ್ಮಪ್ಪನ ಆರಾಧಕರು ಆಗಿದ್ದರು. ಇಂದಿಗೂ ಅವರು ಜೈನ ಸಂಪ್ರದಾಯಗಳ ಕುರುಹುಗಳನ್ನು ಉಳಿಸಿಕೊಳ್ಳುತ್ತಾರೆ. ಉದಾಹರಣೆಗೆ, ಕೆಲವು ನಾಮಧಾರಿ ಉಪ-ಪಂಗಡಗಳು ಕಟ್ಟುನಿಟ್ಟಾಗಿ ಸಸ್ಯಾಹಾರಿಗಳಾಗಿದ್ದಾರೆ (ಬಹುತೇಕ ಒಕ್ಕಲಿಗರು ಸಸ್ಯಾಹಾರವಲ್ಲದವರು ಇದ್ದಾರೆ) ಮತ್ತು ಹೆಚ್ಚಿನ ಕುಟುಂಬಗಳಲ್ಲಿ ತಮ್ಮ ಪೂರ್ವಜರನ್ನು ಸ್ಮರಿಸುವ ಸಂದರ್ಭದಲ್ಲಿ, ಜೈನ ಎಡೆ ಎಂಬ ವಿಶೇಷ ಸಸ್ಯಾಹಾರಿ ಆಹಾರವನ್ನು ತಯಾರಿಸುತ್ತಾರೆ.